ರಂಗಾರೆಡ್ಡಿ (ತೆಲಂಗಾಣ): ಪೋಕ್ಸೋ (POCSO) ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಿಂದ ಕೆರಳಿದ ಆರೋಪಿಯೊಬ್ಬ, ತನ್ನ ಮೇಲೆ ದೂರು ನೀಡಿದ್ದ ಸಂತ್ರಸ್ತ ಬಾಲಕಿ ಹಾಗೂ ಆಕೆಯ ಕುಟುಂಬದವರನ್ನು ಮತ್ತು ತನ್ನದೇ ಪತ್ನಿ-ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಶನಿವಾರ ಮುಂಜಾನೆ ತೆಲಂಗಾಣದಲ್ಲಿ ಜರುಗಿದೆ.
ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ತಾಲೂಕಿನ ದೈವಲಗುಡ ಎಂಬ ಗ್ರಾಮದಲ್ಲಿ ಈ ಭೀಭತ್ಸ ಕೃತ್ಯ ನಡೆದಿದೆ.
ರಾಜ್ಕುಮಾರ್ (28) ಎಂಬಾತನೇ ಈ ಕ್ರೂರ ನರಮೇಧ ಎಸಗಿರುವ ಆರೋಪಿ. ಈತ ಏಳು ವರ್ಷಗಳ ಹಿಂದೆ ಸರಿತಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ಇವರಿಗೆ ಇಬ್ಬರು ಮಕ್ಕಳಿದ್ದರು. ಆದರೆ, ಇತ್ತೀಚೆಗೆ ಬೇರೆ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಜಾಮೀನಿನ ಮೇಲೆ ಹೊರಬಂದು ಕೃತ್ಯ:
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಕಳೆದ ಮೇ 16ರಂದು ಆರೋಪಿ ರಾಜ್ಕುಮಾರ್ ತನಗೆ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಈ ಹಿಂದೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಇತ್ತೀಚೆಗಷ್ಟೇ ಈತ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದನು.
ತನ್ನ ವಿರುದ್ಧ ಪ್ರಕರಣ ದಾಖಲಿಸಿದ ಬಾಲಕಿ ಮತ್ತು ಆಕೆಯ ಕುಟುಂಬದ ಮೇಲೆ ತೀವ್ರ ಸೇಡು ಹೊಂದಿದ್ದ ರಾಜ್ಕುಮಾರ್, ಈ ಭೀಕರ ಸಂಚು ರೂಪಿಸಿದ್ದನು. ಶನಿವಾರ ಬೆಳಗಿನ ಜಾವ, ಯಾರೂ ಇಲ್ಲದ ವೇಳೆ, ಆಕ್ರೋಶದಿಂದ ಕುದಿಯುತ್ತಿದ್ದ ಆತ ಚಾಕುವಿನಿಂದ ಇರಿದು ಸಂತ್ರಸ್ತ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಕ್ರೂರವಾಗಿ ಕೊಂದಿದ್ದಾನೆ. ಅಷ್ಟೇ ಅಲ್ಲದೆ, ತನ್ನದೇ ಮನೆಯಲ್ಲಿದ್ದ ಪತ್ನಿ ಸರಿತಾ ಮತ್ತು ಇಬ್ಬರು ಪುಟ್ಟ ಮಕ್ಕಳನ್ನೂ ಕೂಡ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಘಟನೆ ಬಯಲಿಗೆ ಬಂದಿದ್ದು ಹೇಗೆ?:
ಆರು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿದ ನಂತರ, ಆರೋಪಿ ರಾಜ್ಕುಮಾರ್ ಸ್ವತಃ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆಘಾತಕ್ಕೊಳಗಾದ ಆತನ ಪೋಷಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಚೇವ್ಲ ಎಂಪಿಡಿಒ ಮತ್ತು ಶಬಾದ್ ಪೊಲೀಸ್ ಇನ್ಸ್ಪೆಕ್ಟರ್, ಸಿಪಿ ತರುಣ್ ಜೋಶಿ ಮತ್ತು ಡಿಸಿಪಿ ಯೋಗೇಶ್ ಗೌತಮ್ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಘಟನಾ ಸ್ಥಳದಲ್ಲಿ ಹತರಾದ ಆರು ಮಂದಿಯ ಮೃತದೇಹಗಳು ಬಿದ್ದಿದ್ದವು. ಪೊಲೀಸರು ಸ್ಥಳವನ್ನು ವಶಕ್ಕೆ ಪಡೆದಿದ್ದು, ವಿಧಿವಿಜ್ಞಾನ ತಜ್ಞರು ಮತ್ತು ಶ್ವಾನದಳದ ಸಹಾಯದಿಂದ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಕೊಲೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಭೀಕರ ಹತ್ಯಾಕಾಂಡ ತೆಲಂಗಾಣದಾದ್ಯಂತ ತಲ್ಲಣ ಸೃಷ್ಟಿಸಿದೆ.
