ದಸಂಸ ಹಿರಿಯ ಮುಖಂಡ, ಮಾಜಿ ಜಿಲ್ಲಾ ಸಂಚಾಲಕ ಸುಂದರ್ ಸಾಲ್ಯಾನ್ ಕೆಮ್ಮಡೆ ನಿಧನ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ದ. ಕ. ಜಿಲ್ಲಾ ಸಮಿತಿಯ ಮಾಜಿ ಜಿಲ್ಲಾ ಸಂಚಾಲಕರಾಗಿದ್ದ ಶ್ರೀ ಸುಂದರ್ ಸಾಲ್ಯಾನ್ ಕೆಮ್ಮಡೆ(66ವ) ಮೂರುಕಾವೇರಿ,ಕಿನ್ನಿಗೋಳಿ ಇವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಇಂದು ನಿಧನರಾದರು.
ಕಿನ್ನಿಗೋಳಿ ಸುತ್ತಮುತ್ತ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸುವಲ್ಲಿ ಪಾತ್ರವಹಿಸಿದ್ದ ಶ್ರೀಯುತ ಸುಂದರ್ ಸಾಲ್ಯಾನ್ 95ರ ದಶಕದಲ್ಲಿ ಬಿ ಎಸ್ ಪಿ ಪಕ್ಷವನ್ನು ಕಿನ್ನಿಗೋಳಿ ಸುತ್ತಮುತ್ತ ಕಟ್ಟಿ ಬೆಳೆಸುವಲ್ಲಿ ಕೂಡ ಸುಂದರ್ ಸಾಲ್ಯಾನ್ ಅವರು ಶ್ರಮ ವಹಿಸಿದ್ದರು.
ಕಿನ್ನಿಗೋಳಿ, ಮುಲ್ಕಿ ಸುತ್ತಮುತ್ತದ ದಲಿತರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ 90ದಶಕದಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದರು.
ದಸಂಸವು ಬಿ.ಎಸ್.ಪಿ.ಯನ್ನು ರಾಜಕೀಯ ಪಕ್ಷವನ್ನಾಗಿ ಒಪ್ಪಿಕೊಂಡ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾಗಿ ಶ್ರೀಯುತರು ಕಾರ್ಯ ನಿರ್ವಹಿಸಿದ್ದರು.
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ಕೆಮ್ಮಡೆಯಲ್ಲಿರುವ ಅವರ ಮನೆಯಲ್ಲಿ ಇಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾಡಲಾಗಿತ್ತು.
ನಂತರ ಕಿನ್ನಿಗೋಳಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರೆವೇರಿಸಲಾಯಿತು.
ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು, ಅಪಾರ ಬಂಧು ಬಳಗ,ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ)ದ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ, ಕೃಷ್ಣಾನಂದ ಡಿ, ಸಂಕಪ್ಪ ಕಾಂಚನ್, ರಾಘವೇಂದ್ರ, ಬೌದ್ಧ ಮಹಾಸಭಾದ ಎಸ್.ಆರ್ ಲಕ್ಷ್ಮಣ್, ಎಂ.ವಿ ಪದ್ಮನಾಭ, ದೇವಪ್ಪ ಬೋದ್, ಪದ್ಮನಾಭ ಪೇಜಾವರ, ಭಾಸ್ಕರ್ ಕವತ್ತಾರ್, ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
