ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿತರಿಸಲಾಗಿರುವ ಎನ್ಯುಮರೇಷನ್ ಫಾರ್ಮ್ಗಳ ಪೈಕಿ ಸಾರ್ವಜನಿಕರಿಂದ ಮರಳಿ ಬಂದಿರುವುದು ಕೇವಲ ಶೇ. 11.86 ರಷ್ಟು ಮಾತ್ರ ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರು ಜುಲೈ 29ರ ಕೊನೆಯ ದಿನದವರೆಗೆ ಕಾಯದೆ, ತಕ್ಷಣವೇ ಫಾರ್ಮ್ಗಳನ್ನು ಭರ್ತಿ ಮಾಡಿ ತಲುಪಿಸಬೇಕು ಎಂದು ವಿಶೇಷ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. ಒಂದು ವೇಳೆ ಈ ಫಾರ್ಮ್ ಸಲ್ಲಿಸದಿದ್ದರೆ ಮುಂಬರುವ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯು ತೀವ್ರಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯ ಒಟ್ಟು 18,37,666 ಮತದಾರರ ಪೈಕಿ ಬಿಎಲ್ಒಗಳು ಈಗಾಗಲೇ 17,75,811 ನಾಗರಿಕರಿಗೆ (ಶೇ. 98.45) ಫಾರ್ಮ್ಗಳನ್ನು ವಿತರಿಸಿದ್ದಾರೆ. ಆದರೆ, ಈ ಬೃಹತ್ ಮೊತ್ತದಲ್ಲಿ ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ವಾಪಸ್ ಸಿಕ್ಕಿರುವುದು ಕೇವಲ 2,13,939 ಫಾರ್ಮ್ಗಳು ಮಾತ್ರ ಎಂದು ಜಿಲ್ಲಾಧಿಕಾರಿಗಳು ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ.
ಕೊನೆ ದಿನಗಳಲ್ಲಿ ತಾಂತ್ರಿಕ ಸಮಸ್ಯೆಯ ಆತಂಕ:
ಇನ್ನೂ ಸಮಯಾವಕಾಶ ಇರುವುದರಿಂದ ಬಹಳಷ್ಟು ನಾಗರಿಕರು ಫಾರ್ಮ್ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದರೆ, ಜುಲೈ 29ರ ಗಡುವಿನ ಒಳಗಾಗಿ ಈ ಎಲ್ಲಾ ಲಕ್ಷಾಂತರ ಅರ್ಜಿಗಳನ್ನು ಆ್ಯಪ್ ಮುಖಾಂತರ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಬಿಎಲ್ಒಗಳಿಗೆ ಒಂದು ಫಾರ್ಮ್ ಅನ್ನು ಡಿಜಿಟಲೀಕರಣಗೊಳಿಸಲು ಕನಿಷ್ಠ 2 ರಿಂದ 4 ನಿಮಿಷಗಳ ಸಮಯ ಬೇಕಾಗುವುದರಿಂದ, ಕೊನೆಯ ದಿನಗಳಲ್ಲಿ ಎಲ್ಲವನ್ನೂ ಒಟ್ಟಿಗೆ ಮಾಡುವುದು ತಾಂತ್ರಿಕವಾಗಿ ಅಸಾಧ್ಯವಾಗುತ್ತದೆ. ಆದ್ದರಿಂದ ನಾಗರಿಕರು ವಿಳಂಬ ಮಾಡದೆ ಇದೇ ವಾರದಲ್ಲಿ ತಮ್ಮ ಫಾರ್ಮ್ಗಳನ್ನು ಒಪ್ಪಿಸಬೇಕು ಎಂದು ಡಿಸಿ ದರ್ಶನ್ ಹೆಚ್.ವಿ ಸ್ಪಷ್ಟಪಡಿಸಿದ್ದಾರೆ.
ಕರಡು ಪಟ್ಟಿಗೆ ಫಾರ್ಮ್ ಸಲ್ಲಿಕೆ ಕಡ್ಡಾಯ:
ಸಾರ್ವಜನಿಕರು ತಾವು ಭರ್ತಿ ಮಾಡಿ ನೀಡುವ ಎನ್ಯುಮರೇಷನ್ ಫಾರ್ಮ್ಗಳ ಆಧಾರದ ಮೇಲೆ ಮಾತ್ರವೇ ಜುಲೈ 29ರ ನಂತರ ಹೊರಬರುವ ಡ್ರಾಫ್ಟ್ (ಕರಡು) ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಮುಂದುವರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಥವಾ ಫಾರ್ಮ್ ಭರ್ತಿ ಮಾಡುವಲ್ಲಿ ಯಾವುದೇ ರೀತಿಯ ಗೊಂದಲಗಳಿದ್ದಲ್ಲಿ, ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿರುವ 'ಮತದಾರರ ಸಹಾಯ ಕೇಂದ್ರ'ಕ್ಕೆ (Voter Facilitation Center) ಭೇಟಿ ನೀಡಿ ಅಧಿಕಾರಿಗಳ ನೆರವು ಪಡೆಯಬಹುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
