ದೇಶ ವಿದೇಶ

ಎಚ್‌ಎಂಟಿ ಜಾಗದ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ; ದಾಖಲೆಗಳಿದ್ದರೆ ಪರಿಶೀಲಿಸಲಿ: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸವಾಲು

 



ಬೆಂಗಳೂರು: "ಬೆಂಗಳೂರಿನ ಎಚ್‌ಎಂಟಿ (HMT) ಸಂಸ್ಥೆಗೆ ಸೇರಿದ ಭೂಮಿಗೂ ಮತ್ತು ರಾಜ್ಯ ಅರಣ್ಯ ಇಲಾಖೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆ ಜಮೀನಿನ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ. ಈ ವಿಷಯದ ಬಗ್ಗೆ ಕೇವಲ ರಾಜಕೀಯ ಭಾಷಣ ಮಾಡುತ್ತಿರುವವರು ಮೊದಲು ದಾಖಲೆಗಳನ್ನು ತಂದು ಪರಿಶೀಲಿಸಲಿ" ಎಂದು ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜೆ.ಪಿ. ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಂಟಿ ಜಮೀನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ನೀಡಿರುವ ನೋಟಿಸ್ ಹಾಗೂ ಈ ಬಗ್ಗೆ ಸಚಿವ ಈಶ್ವರ ಖಂಡ್ರೆ ಅವರು ನೀಡಿರುವ ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

'ಜೈವಿಕ ಉದ್ಯಾನವನ'ದ ಹೆಸರಿನಲ್ಲಿ ಲೂಟಿ?

ಸುದ್ದಿಗೋಷ್ಠಿಯಲ್ಲಿ ಸಚಿವ ಈಶ್ವರ ಖಂಡ್ರೆ ಅವರ ವರ್ತನೆಯನ್ನು ನೇರವಾಗಿ ಪ್ರಶ್ನಿಸಿದ ಕುಮಾರಸ್ವಾಮಿ, "ಎಚ್‌ಎಂಟಿ ಜಮೀನಿನ ಪಕ್ಕದಲ್ಲಿರುವ ಜಕ್ಕೂರು ಪ್ಲಾಂಟೇಶನ್ ವ್ಯಾಪ್ತಿಯಲ್ಲಿ ಸಾಕಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದೆ. ಅಲ್ಲಿ 444 ಎಕರೆ ಪ್ರದೇಶದಲ್ಲಿ ಜೈವಿಕ ಉದ್ಯಾನವನ ಮಾಡುವುದಾಗಿ ಹೇಳಿದ್ದೀರಿ. ಅರಮನೆ ಜಾಗವನ್ನು ವಶಕ್ಕೆ ಪಡೆಯುತ್ತೇವೆ ಎಂದು ಹೇಳುತ್ತಲೇ ಇದ್ದೀರಿ, ಆದರೆ ಅಲ್ಲಿ ಸಾಲು ಸಾಲು ಕಲ್ಯಾಣ ಮಂಟಪಗಳು ತಲೆ ಎತ್ತಿವೆ. ಆ ಕಲ್ಯಾಣ ಮಂಟಪಗಳಿಗೆ ಯಾವ ಆಧಾರದ ಮೇಲೆ ಅನುಮತಿ ನೀಡಲಾಗಿದೆ? ಜೈವಿಕ ಉದ್ಯಾನವನ ಮಾಡುವುದು ಎಂದರೆ ಇದೇನಾ ಖಂಡ್ರೆ ಅವರೇ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

1960 ರಲ್ಲೇ ಕಾನೂನುಬದ್ಧವಾಗಿ ಹಸ್ತಾಂತರ:

ಕೇಂದ್ರ ಸಚಿವರು 1960 ರ ನವೆಂಬರ್ 25 ರಂದು ಎಚ್‌ಎಂಟಿ ಸಂಸ್ಥೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಅಧಿಕೃತ ಸರ್ಕಾರಿ ಆದೇಶದ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು. "1960 ರಲ್ಲೇ ಕಾನೂನುಬದ್ಧವಾಗಿ ಈ ಭೂಮಿಯನ್ನು 'ಡೀಫಾರೆಸ್ಟ್' (ಅರಣ್ಯ ಮುಕ್ತ) ಮಾಡಲಾಗಿತ್ತು. ಅಂದಿನ ಡಿಎಫ್‌ಒ (DFO) ಅವರಿಂದಲೇ ನಿರಪೇಕ್ಷಣಾ ಪತ್ರ (NOC) ಪಡೆದು ಎಚ್‌ಎಂಟಿಗೆ ನೀಡಲಾದ ಜಾಗವನ್ನು ಇಂದು ಕಾನೂನುಬಾಹಿರ ಒತ್ತುವರಿ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಈಶ್ವರ ಖಂಡ್ರೆ ಅವರು ಎಷ್ಟು ಅರಣ್ಯ ಭೂಮಿಯನ್ನು ಉಳಿಸಿದ್ದಾರೆ ಎಂದು ಬಹಿರಂಗಪಡಿಸಲಿ" ಎಂದು ಅವರು ಗುಡುಗಿದರು.

ಪ್ರಸ್ತುತ ಎಚ್‌ಎಂಟಿ ಜಾಗಕ್ಕೆ ಸಂಬಂಧಿಸಿದ ವ್ಯಾಜ್ಯವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಇತ್ತ ರಾಷ್ಟ್ರದ ಹೆಮ್ಮೆಯ ಸಂಸ್ಥೆಯಾದ ಎಚ್‌ಎಂಟಿ ಪುನಶ್ಚೇತನಕ್ಕಾಗಿ ಕೇಂದ್ರದ ಪ್ಯಾಕೇಜ್ ಪ್ರಕ್ರಿಯೆಗಳು ಕೊನೆಯ ಹಂತ ತಲುಪಿವೆ. ಇಂತಹ ಸಂದರ್ಭದಲ್ಲಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಲು ಕೇವಲ 15 ದಿನಗಳಷ್ಟೇ ಬಾಕಿ ಇರುವ ಅಧಿಕಾರಿಯೊಬ್ಬರಿಂದ ಜಾಗ ತೆರವುಗೊಳಿಸುವಂತೆ ಕಾನೂನುಬಾಹಿರ ಆದೇಶ ಕೊಡಿಸಿರುವುದರ ಹಿಂದೆ ದೊಡ್ಡ ಒಳಸಂಚಿದೆ ಎಂದು ಕುಮಾರಸ್ವಾಮಿ ಆಪಾದಿಸಿದರು.

ಇಸ್ರೋ ಜಾಗಕ್ಕೆ ಬೆಂಬಲ, ರಿಯಲ್ ಎಸ್ಟೇಟ್‌ಗೆ ವಿರೋಧ:

"ಎಚ್‌ಎಂಟಿಯ ಒಟ್ಟು ಜಾಗದಲ್ಲಿ ಕೆಲ ಭಾಗವನ್ನು ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋಗೆ (ISRO) ನೀಡಲಾಗಿದೆ. ದೇಶದ ಪ್ರಗತಿಗೆ ಪೂರಕವಾದ ಇಂತಹ ಕಾರ್ಯಕ್ರಮಗಳನ್ನು ನಾನು ಸದಾ ಸ್ವಾಗತಿಸುತ್ತೇನೆ. ಆದರೆ, ಕನ್ನಡಿಗರ ಆಸ್ತಿಯಾಗಿರುವ ಈ ಜಮೀನನ್ನು ವಶಪಡಿಸಿಕೊಂಡು ಸರ್ಕಾರವೇ ರಿಯಲ್ ಎಸ್ಟೇಟ್ ಮಾಡಲು ಹೊರಟರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಲ್ಲಿ 280 ಎಕರೆ ನೆಡುತೋಪು ಇದೆ ಎಂದು ಸುಳ್ಳು ಹೇಳಲಾಗುತ್ತಿದೆ. ಬನ್ನಿ, ಮಾಧ್ಯಮಗಳ ಸಮ್ಮುಖದಲ್ಲೇ ಜಂಟಿ ವೀಕ್ಷಣೆ ಮಾಡೋಣ. ಯಾರು ಎಷ್ಟು ಜಾಗ ಕಬಳಿಸಿದ್ದಾರೆ ಎಂಬ ಸತ್ಯ ಆಗ ಬಯಲಾಗುತ್ತದೆ" ಎಂದು ಮುಕ್ತ ಸವಾಲು ಹಾಕಿದರು.

ಸರ್ಕಾರದ ಸಾಲದ ಹೊರೆ ಹಾಗೂ ರಾಜಕೀಯ ವಿಷಯಗಳು:

ಬೆಂಗಳೂರು ಅಭಿವೃದ್ಧಿಗೆ ₹1.5 ಲಕ್ಷ ಕೋಟಿ ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಲೇವಡಿ ಮಾಡಿದ ಅವರು, "ಖಜಾನೆಯಲ್ಲಿ ಹಣವೇ ಇಲ್ಲದ ಈ ಸರ್ಕಾರ ಯಾರ ತಲೆ ಮೇಲೆ ಸಾಲದ ಹೊರೆ ಹೇರಲು ಹೊರಟಿದೆ?" ಎಂದು ಪ್ರಶ್ನಿಸಿದರು. ಅಲ್ಲದೆ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಮನಗರ, ಯಶವಂತಪುರ ಸೇರಿದಂತೆ ಹಲವೆಡೆ ಗುಂಪು ಗುಂಪಾಗಿ ಅಕ್ರಮ ನಡೆದಿದೆ. ಅಕ್ರಮ ನಡೆಯದೇ ಇದ್ದರೆ 35 ಬಿಇಒ (BEO) ಗಳಿಗೆ ಚುನಾವಣಾ ಆಯೋಗ ಏಕೆ ನೋಟಿಸ್ ನೀಡುತ್ತಿತ್ತು ಎಂದು ಪ್ರಶ್ನಿಸಿದರು.

ಕೊನೆಯಲ್ಲಿ ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಕುಮಾರಸ್ವಾಮಿ, "ನಾನು ಸದ್ಯ ಕೇಂದ್ರ ಸಚಿವನಾಗಿದ್ದು, ಇನ್ನೂ ಮೂರು ವರ್ಷಗಳ ಸಂಸದರ ಅಧಿಕಾರಾವಧಿ ಬಾಕಿ ಇದೆ. ಹಾಗಾಗಿ ತಕ್ಷಣವೇ ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ. ಆದರೆ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಸಕ್ರಿಯನಾಗಿರುತ್ತೇನೆ. ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದರು.