ಕ್ರೈಂ

ಸುಳ್ಯದಲ್ಲಿ ಗೃಹಿಣಿಯ ನಿಗೂಢ ಸಾವು: ತಾಯಿಗೆ ಕರೆ ಮಾಡಿ ಅಳಲು ತೋಡಿಕೊಂಡ ಬೆನ್ನಲ್ಲೇ ಹೆಣವಾದ ಮಗಳು; ಅತ್ತೆ, ಮಾವ, ನಾದಿನಿ ವಿರುದ್ಧ ಕೊಲೆ ಕೇಸ್ ಜಾರಿ!


ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ವಿವಾಹಿತ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವು ತೀವ್ರ ಸಂಚಲನ ಮೂಡಿಸಿದೆ. ಗಂಡನ ಮನೆಯಲ್ಲಿ ನಡೆಯುತ್ತಿದ್ದ ಕೌಟುಂಬಿಕ ಕಲಹ ಹಾಗೂ ತೀವ್ರ ಕಿರುಕುಳದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಆರೋಪಿಸಲಾಗಿದೆ. ಮೃತ ಗೃಹಿಣಿಯ ತಾಯಿ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮಾವ, ಅತ್ತೆ ಮತ್ತು ನಾದಿನಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (BNS) ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



ನಾಲ್ಕು ವರ್ಷಗಳ ಸಂಸಾರದಲ್ಲಿ ನರಕಯಾತನೆ!:

ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿಯಾದ ಜುಬೈದ (43) ಎಂಬವರ ಪುತ್ರಿ ಫಾತಿಮತ್‌ ನಿಶಾನ ಅವರಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಹೊಸತಿನಲ್ಲೇ ಸಂಸಾರದಲ್ಲಿ ಮನಸ್ತಾಪಗಳು ಶುರುವಾಗಿದ್ದು, ಗಂಡನ ಮನೆಯವರು ನಿಶಾನ ಅವರಿಗೆ ಸಣ್ಣಪುಟ್ಟ ವಿಷಯಗಳಿಗೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.



ಫೋನ್ ಕಿತ್ತುಕೊಂಡು ಕೊಲ್ಲುವುದಾಗಿ ಧಮ್ಕಿ ಹಾಕಿದ್ದ ಮಾವ:

ಜುಲೈ 18ರ ಶನಿವಾರ ತಡರಾತ್ರಿ ಫಾತಿಮತ್‌ ನಿಶಾನ ಅವರು ತಾಯಿಗೆ ಮೊಬೈಲ್ ಕರೆ ಮಾಡಿ ಗಂಡನ ಮನೆಯಲ್ಲಿ ತನಗಾಗುತ್ತಿರುವ ಕಿರುಕುಳದ ಬಗ್ಗೆ ಕಣ್ಣೀರು ಹಾಕಿದ್ದರು. ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಅವರು ತನಗೆ ವಿಪರೀತ ಹಿಂಸೆ ನೀಡುತ್ತಿದ್ದಾರೆ ಎಂದು ಅಳುತ್ತಿದ್ದರು. ಮಗಳು ಮಾತನಾಡುತ್ತಿದ್ದಾಗಲೇ ಸಮಾಧಾನ ಮಾಡಲು ಯತ್ನಿಸಿದ ತಾಯಿಗೆ ಆಘಾತ ಕಾದಿತ್ತು. ನಿಶಾನ ಕೈಯಿಂದ ಮೊಬೈಲ್ ಕಿತ್ತುಕೊಂಡ ಮಾವ ಅಲವಿ, "ನಿನ್ನ ಮಗಳನ್ನು ಜೀವಂತವಾಗಿ ಬಿಡುವುದಿಲ್ಲ, ಕೊಲೆ ಮಾಡುತ್ತೇನೆ" ಎಂದು ಫೋನ್‌ನಲ್ಲೇ ತಾಯಿಗೆ ನೇರ ಪ್ರಾಣ ಬೆದರಿಕೆ ಹಾಕಿದ್ದ.



ಮನೆಗೆ ಓಡಿ ಬರುವಷ್ಟರಲ್ಲಿ ಮುಗಿದಿತ್ತು ಕಥೆ!:

ಮಗಳ ಕಿರುಚಾಟ ಹಾಗೂ ಮಾವನ ಬೆದರಿಕೆ ಕರೆ ಕೇಳಿ ಬೆಚ್ಚಿಬಿದ್ದ ತಾಯಿ ಜುಬೈದ ಅವರು ರಾತ್ರೋರಾತ್ರಿ ಗಾಬರಿಯಿಂದ ಮಗಳ ಮನೆಗೆ ಧಾವಿಸಿದ್ದಾರೆ. ಆದರೆ ದುರದೃಷ್ಟವಶಾತ್ ತಾಯಿ ಸ್ಥಳಕ್ಕೆ ತಲುಪುವಷ್ಟರಲ್ಲೇ ಫಾತಿಮತ್‌ ನಿಶಾನ ಮೃತಪಟ್ಟಿದ್ದರು. ಕೌಟುಂಬಿಕ ದ್ವೇಷ ಹಾಗೂ ಮನಸ್ತಾಪದ ಕಾರಣಕ್ಕಾಗಿಯೇ ತನ್ನ ಮಗಳನ್ನು ಸಂಚು ರೂಪಿಸಿ ಅತ್ತೆ, ಮಾವ ಹಾಗೂ ನಾದಿನಿ ಸೇರಿ ಕೊಲೆ ಮಾಡಿದ್ದಾರೆ ಎಂದು ಜುಬೈದ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ.


BNS ಕಾಯ್ದೆಯಡಿ ದೂರು ದಾಖಲು:

ಈ ಘೋರ ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ನೀಡಿದ ದೂರಿನನ್ವಯ ಸುಳ್ಯ ಠಾಣಾ ಪೊಲೀಸರು ತಕ್ಷಣವೇ ಮುಖದ್ದಮೆ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026, ಕಲಂ: 85, 103(1) R/W 3(5) BNS 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ